ಪಂಜಾಬ್ :25 ವರ್ಷಗಳ ನಾಪತ್ತೆಯಾಗಿದ್ದ ವ್ಯಕ್ತಿ ಈಗ ಮರಳಿ ಮನೆಗೆ ಬಂದ: 2ನೇ ವಿವಾಹವಾದ ಪತ್ನಿಗೆ 'ಧರ್ಮ ಸಂಕಟ'...!!
ಪಂಜಾಬ್: ಕೆಲವೊಮ್ಮೆ ಜೀವನದಲ್ಲಿನ ತಿರುವುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಂತೋಷದ ಕಣ್ಣೀರು, ನೋವಿನ ಮೌನದೊಂದಿಗೆ ಬೆರೆತುಹೋಗುತ್ತದೆ. ಪಂಜಾಬ್ನ ಕಪುರ್ತಲಾದಲ್ಲಿ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ.
25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ದಿಢೀರ್ ಎಂದು ಈಗ ಮನೆಗೆ ಮರಳಿದ್ದಾರೆ. ಪತಿ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ಪತ್ನಿ ಅದೇ ವ್ಯಕ್ತಿಯ ಸ್ವಂತ ತಮ್ಮನನ್ನು ವರಿಸಿದ್ದರು. ಇದೀಗ, ಮೊದಲ ಪತಿ ವಾಪಸ್ಸಾಗಿದ್ದು, ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಘಟನೆಯ ವಿವರ: ಕಪುರ್ತಲಾದ ಶಿವ ದಯಾಳ್ ವಾಲಾ ಗ್ರಾಮದ ಹಂಸಾ ಸಿಂಗ್ 25 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ವ್ಯಕ್ತಿ. ಕುಟುಂಬದವರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿದ್ದಾಗ, ಮೂರು ವರ್ಷಗಳ ನಂತರ ಆತ ಮೃತಪಟ್ಟಿರಬಹುದು ಎಂದು ಭಾವಿಸಿದ್ದರು. ಅದಾದ ಬಳಿಕ, ಆತನ ಪತ್ನಿ ವಿಮಲಾ ದೇವಿ ಅವರಿಗೆ ಹಂಸಾ ಸಿಂಗ್ ಅವರ ಕಿರಿಯ ಸಹೋದರ ಸುಖ್ ಸಿಂಗ್ ಜೊತೆ ವಿವಾಹ ಮಾಡಿಕೊಡಲಾಯಿತು. ಕಳೆದ 22 ವರ್ಷಗಳಿಂದ ಈ ದಂಪತಿ ಸಂಸಾರ ನಡೆಸುತ್ತಿದ್ದು, ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ.
ಭಿಕ್ಷುಕನ ರೂಪದಲ್ಲಿ ಪತ್ತೆ: ಉತ್ತರ ಪ್ರದೇಶದ ನರ್ಥೂರ್ ಮಾರುಕಟ್ಟೆಯಲ್ಲಿ ಭಿಕ್ಷುಕನಂತೆ ಅಲೆದಾಡುತ್ತಿದ್ದ ಹಂಸಾ ಸಿಂಗ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರ ಗುರುತು ಪತ್ತೆಯಾಗಿದೆ. ಪಂಜಾಬ್ ಪೊಲೀಸರ ಸಹಾಯದಿಂದ ಕೇವಲ 72 ಗಂಟೆಗಳಲ್ಲಿ ಕುಟುಂಬದವರನ್ನು ಸಂಪರ್ಕಿಸಲಾಯಿತು. ಹಲವು ವರ್ಷಗಳ ಬಳಿಕ ಹಂಸಾ ಸಿಂಗ್ ಅವರನ್ನು ನೋಡುತ್ತಿರುವ ಕುಟುಂಬಸ್ಥರು ಆತನನ್ನು ಗುರುತಿಸಲು ಕಷ್ಟಪಟ್ಟರು. ಆದರೆ, ಬಾಲ್ಯದ ನೆನಪುಗಳನ್ನು ಆತ ಹಂಚಿಕೊಂಡಾಗ ಎಲ್ಲರ ಕಣ್ಣಲ್ಲಿ ನೀರು ಜಿನುಗಿತು.
ಭಾವನಾತ್ಮಕ ಸಂಘರ್ಷ: ಹಂಸಾ ಸಿಂಗ್ ಮರಳಿದ್ದು ಕುಟುಂಬಕ್ಕೆ ಒಂದೆಡೆ ಸಂತಸ ತಂದಿದ್ದರೂ, ಅವರ ಪತ್ನಿ ವಿಮಲಾ ದೇವಿ ಅವರಿಗೆ ಇದು ದೊಡ್ಡ ಧರ್ಮಸಂಕಟ ತಂದೊಡ್ಡಿದೆ. ಪತಿ ನಿಧನರಾಗಿರಹುದು ಎಂದು ಎರಡನೇ ವಿವಾಹವಾಗಿರುವ ಆಕೆ ಈಗ ತನ್ನ ಮೊದಲ ಪತ್ನಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದು ಪ್ರಶ್ನೆಯಾಗಿದೆ. ಇದರಿಂದ, 22 ವರ್ಷಗಳ ಕಾಲ ತನಗೆ ಆಸರೆಯಾಗಿ ನಿಂತು, ಇಬ್ಬರು ಮಕ್ಕಳ ತಂದೆಯಾಗಿರುವ ಎರಡನೇ ಪತಿ ಸುಖ್ ಸಿಂಗ್ ಅವರನ್ನು ಬಿಟ್ಟು ಬರಲು ಆಕೆ ನಿರಾಕರಿಸಿದ್ದಾರೆ. ಹಳೆಯ ಸಂಬಂಧ ಮತ್ತು ಹೊಸ ಜೀವನದ ನಡುವೆ ಸಿಲುಕಿರುವ ವಿಮಲಾ ದೇವಿ, ಹಂಸಾ ಸಿಂಗ್ ಅವರನ್ನು ಪತಿಯಾಗಿ ಸ್ವೀಕರಿಸಲು ಒಪ್ಪುತ್ತಿಲ್ಲ.
ಸಹೋದರರ ಆಸರೆ: ಪತ್ನಿ ನಿರಾಕರಿಸಿದ ಕಾರಣ, ಹಂಸಾ ಸಿಂಗ್ ಈಗ ತಮ್ಮ ಸಹೋದರರ ಜೊತೆ ವಾಸಿಸುತ್ತಿದ್ದಾರೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ್ದರಿಂದ ಸರ್ಕಾರ ಚಿಕಿತ್ಸೆ ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಗ್ರಾಮದ ಸರಪಂಚ್ ಮಲ್ಕೀತ್ ಸಿಂಗ್ ಮನವಿ ಮಾಡಿದ್ದಾರೆ. ಭೂಮಿಯೂ ಇಲ್ಲದ ಈ ಕುಟುಂಬಕ್ಕೆ ಹಂಸಾ ಸಿಂಗ್ ಅವರ ಮುಂದಿನ ಜೀವನ ನಿರ್ವಹಣೆ ದೊಡ್ಡ ಸವಾಲಾಗಿದೆ.