ತೆಲಂಗಾಣ :ಮೂರನೇ ಮಗುವೂ ಹೆಣ್ಣಾಗುತ್ತೆ ಎಂದು ಗರ್ಭಿಣಿ ಹೆಂಡತಿ, ಮಕ್ಕಳನ್ನು ನೀರಲ್ಲಿ ಮುಳುಗಿಸಿ ಕೊಂದ ಪಾಪಿ...!!

ತೆಲಂಗಾಣ :ತನಗೆ ಮೂರನೇ ಮಗುವೂ ಹೆಣ್ಣಾಗಬಹುದು ಎಂಬ ಭಯದಿಂದ ಗರ್ಭಿಣಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ತೆಲಂಗಾಣದ ಹನ್ಮಕೊಂಡ ಜಿಲ್ಲೆಯ ಐನವೊಲು ಮಂಡಲದ ಪುನ್ನೇಲು ಗ್ರಾಮದಲ್ಲಿ ನಡೆದಿದೆ.
ಅಜರುದ್ದೀನ್ ಎಂಬ ವ್ಯಕ್ತಿಗೆ ಈಗಾಗಲೇ.ಉಮೇರಾ (8) ಮತ್ತು ಆಯೇಷಾ (6) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದರು. ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದುದರಿಂದ ಈ ಬಾರಿಯೂ ಹೆಣ್ಣುಮಗುವಾಗುತ್ತದೆ ಎಂದು ಆತನಿಗೆ ಆತಂಕವಿತ್ತು. ಆಕೆ ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದರಿಂದ ಆತನ ಭಯ ಹೆಚ್ಚಾಗಿತ್ತು. ಆಕೆಯ ಹೊಟ್ಟೆಯಲ್ಲಿರುವುದು ಹೆಣ್ಣು ಮಗುವೇ ಎಂಬ ಅನುಮಾನದಿಂದ ಆತ ಕೋಪಗೊಂಡಿದ್ದ.
ಹೀಗಾಗಿ, ಮತ್ತೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ. ಆದರೆ, ಈ ಬಾರಿ ಆಕೆ ಅದಕ್ಕೆ ಒಪ್ಪಿರಲಿಲ್ಲ. ಏನೇ ಆದರೂ ಈ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಆಕೆ ಹಠ ಹಿಡಿದಿದ್ದರು. ಇದರಿಂದ ಆತ ಕೋಪಗೊಂಡಿದ್ದ.
ಬಳಿಕ ಆತ ತಾನು ಕೆಲಸ ಮಾಡುವ ಈಜುಕೊಳಕ್ಕೆ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕರೆದೊಯ್ದು, ನೀರಿಗೆ ತಳ್ಳಿ ಕೊಲೆ ಮಾಡಿದ. ಇದಾದ ನಂತರ ಈ ಘಟನೆಯನ್ನು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವುದಾಗಿ ಬಿಂಬಿಸಲು ಪ್ರಯತ್ನಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಮಗಳು ಮತ್ತು ಮೊಮ್ಮಕ್ಕಳ ಸಾವು ಸಹಜವಲ್ಲ ಎಂದು ಫರ್ಹತ್ನ ತಂದೆ ಅನುಮಾನ ವ್ಯಕ್ತಪಡಿಸಿ ಅಜರುದ್ದೀನ್ ವಿರುದ್ಧ ಆರೋಪ ಮಾಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದರ. ಆ ಸಮಯದಲ್ಲಿ ಆತ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.