ಕುಂಬಳೆ :ನಿಶ್ಚಿತಾರ್ಥವಾಗಿದ್ದ ಯುವಕ ಅಪಘಾತದಲ್ಲಿ ಸಾವು…ಅವನ ಪಕ್ಕದಲ್ಲೇ ನನ್ನ ಅಂತ್ಯಕ್ರಿಯೆ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಮನನೊಂದು ಯುವತಿ ಆತ್ಮಹತ್ಯೆ....
ಕುಂಬಳೆ ಮೇ 11: ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವು ತಾಳಲಾರದೆ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಿದೂರಿನಲ್ಲಿ ಸಂಭವಿಸಿದೆ. ಕಿದೂರು ಕುಂದಂಕೆರಡುಕದ ಬಿ. ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26) ಮೃತ ದುರ್ದೈವಿ.
ತಮಿಳುನಾಡು ಮೂಲದ ಮಣಿ (30) ಎಂಬುವರ ಜೊತೆ ಪ್ರಫುಲ್ಲಾ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ಸಂಭವಿಸಿದ ಮೋಟಾರು ಸೈಕಲ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಂದಿನಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಫುಲ್ಲಾ, ಭಾನುವಾರ ಮನೆಯವರು ಸಂಬಂಧಿಕರ ಮದುವೆಗೆ ಹೋಗಿದ್ದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ಮಣಿಯನ್ನು ಎಲ್ಲಿ ಸಮಾಧಿ ಮಾಡಲಾಗಿದೆಯೋ ಅಲ್ಲೇ ನನ್ನ ಅಂತ್ಯಕ್ರಿಯೆ ಮಾಡಬೇಕು” ಎಂದು ಪ್ರಫುಲ್ಲಾ ಡೆತ್ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಕುಂಬಳೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ