ಮೈಸೂರು : ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ಅರ್ಥ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿ ಎಂದಿದ್ದಾರೆ. ಈ ಮಾತಿನ ಅರ್ಥವೇನು? ಎಂಬ ಬಗ್ಗೆ ಮೈಸೂರಿನ ಚಿನ್ನ-ಬೆಳ್ಳಿ ವ್ಯಾಪಾರಿಗಳು, ತಯಾರಕರು ಹಾಗೂ ಗ್ರಾಹಕರನ್ನು ಮಾತನಾಡಿಸಿದಾಗ ಅವರು ಹೇಳಿದ ಅಭಿಪ್ರಾಯಗಳ ಪ್ರತ್ಯಕ್ಷ ವರದಿ ಇಲ್ಲಿದೆ.
ಚಿನ್ನ- ಬೆಳ್ಳಿ ವ್ಯಾಪಾರಿಗಳು ಹೀಗಂತಾರೆ: 'ಪ್ರಧಾನಿಯವರ ಮಾತು ನೂರಕ್ಕೆ-ನೂರರಷ್ಟು ಸತ್ಯ. ಮೊದಲು ದೇಶ ಉಳಿಯಬೇಕು. ಅದಕ್ಕಾಗಿ ಈ ರೀತಿ ಹೇಳಿದ್ದಾರೆ. ವಿದೇಶಿ ವಿನಿಮಯ ಉಳಿಸಿದರೆ ದೇಶ ಸ್ಟ್ರಾಂಗ್ ಆಗುತ್ತೆ ಅನ್ನೋದು ಅವರ ಅಭಿಪ್ರಾಯವಾಗಿದೆ. ಚಿನ್ನ ಸಹ ವಿದೇಶದಿಂದ ಆಮದು ಆಗುತ್ತಿದೆ. ಅದರಿಂದಾಗಿ ಚಿನ್ನದ ಖರೀದಿ ನಿಲ್ಲಿಸಿ ಎಂದು ಹೇಳಿದ್ದಾರೆ. ಅವರು ಹೇಳಿದ್ದು ಸರಿ ಇದೆ. ಇದರಿಂದ ಚಿನ್ನದ ವ್ಯಾಪಾರಿಗಳಿಗೆ ಸಲ್ಪ ಕಷ್ಟ ಆಗುತ್ತದೆ ನಿಜ. ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದಾರೆ' ತುಳಸಿ ಜ್ಯೂವೆಲ್ಲರ್ಸ್ ಮಾಲೀಕ ಮನೋಹರ್ ಬಾಬು.
ಚಿನ್ನ-ಬೆಳ್ಳಿ ತಯಾರಕ ಹೇಳುವುದೇನು? 'ಇತ್ತೀಚಿಗೆ ಚಿನ್ನದ ಖರೀದಿ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಒಂದು ವರ್ಷಕ್ಕೆ 7,20,000 ಕೋಟಿ ರೂ. ಮೌಲ್ಯದ ಚಿನ್ನ ಖರೀದಿ ಆಗುತ್ತಿದೆ. ಇದರಿಂದ ದೇಶದ ಅರ್ಥ ವ್ಯವಸ್ಥೆ ದುರ್ಬಲ ಆಗುತ್ತಿದೆ. ಆದ್ದರಿಂದ, ಚಿನ್ನದ ಖರೀದಿ ಒಂದು ವರ್ಷ ನಿಲ್ಲಿಸಿ ಎಂದು ಹೇಳಿರುವುದು ಸರಿ ಇದೆ. ದೇಶದ ದೃಷ್ಟಿಯಿಂದ ದೇಶವಾಸಿಗಳು ಚಿನ್ನ ಖರೀದಿ ಮಾಡಬಾರದು. ಈಗ ಬ್ಯಾಂಕ್ಗಳಲ್ಲಿ ಹಣ ಡಿಪಾಸಿಟ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ದೇಶದ ಅರ್ಥ ವ್ಯವಸ್ಥೆಯ ಮೇಲೆ ಆಗುತ್ತಿದೆ. ಇದನ್ನು ಕಡಿಮೆ ಮಾಡಲು ಪ್ರಧಾನಿಯವರು ಹೀಗೆ ಹೇಳಿದ್ದಾರೆ. ಇದರಿಂದ ಚಿನ್ನ-ಬೆಳ್ಳಿ ತಯಾರಿಕೆ ಮಾಡುವವರಿಗೆ ತೊಂದರೆ ಆಗಿದೆ ನಿಜ. ಆದರೆ, ದೇಶಕ್ಕಾಗಿ ಚಿನ್ನ-ಬೆಳ್ಳಿ ಆಭರಣ ತ್ಯಾಗ ಮಾಡಬೇಕು' ಎಂದು ಚಿನ್ನ-ಬೆಳ್ಳಿ ತಯಾರಕ ಸೋಮಶೇಖರ್ ರಾಜು ಅವರು ಹೇಳಿದರು.
ನಮ್ಮ ವಿದೇಶಿ ವಿನಿಮಯ ಉಳಿಯಲಿದೆ : 'ಪ್ರಧಾನಿಯವರ ಮಾತು ಸರಿ ಇದೆ. ಬ್ಲಾಕ್ ಮನಿ ಇರುವವರು ಚಿನ್ನ ಖರೀದಿ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದೆ. ಅವರು ಅಗತ್ಯ ಇರುವಷ್ಟು ಚಿನ್ನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ವಿದೇಶದಿಂದ ಚಿನ್ನದ ಆಮದು ಆಗುತ್ತಿದೆ. ಇದು ನಮ್ಮ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ, ಚಿನ್ನ ಖರೀದಿ ಮಾಡದೇ ಇದ್ದರೆ ನಮ್ಮ ವಿದೇಶಿ ವಿನಿಮಯ ಉಳಿಯಲಿದೆ. ಇದರಿಂದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಆಗುವುದಿಲ್ಲ' ಎಂದು ಎಲ್ಐಸಿ ಸೇಲ್ಸ್ ಅಡ್ವೈಸರ್ ಮಹದೇವಸ್ವಾಮಿ ತಿಳಿಸಿದರು.
ಗೃಹಿಣಿ ಸೌಮ್ಯ ಎಂಬುವರು ಮಾತನಾಡಿ, 'ನಾನು ಸಹ ಚಿನ್ನ ಖರೀದಿ ಮಾಡಲು ನಮ್ಮ ಮನೆಯವರಿಗೆ ಒತ್ತಡ ಹಾಕುತ್ತಿದ್ದೆ. ಆದರೆ, ಪ್ರಧಾನಿಯವರ ಹೇಳಿಕೆ ನಂತರ ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ವಿದೇಶದಿಂದ ಆಮದು ಹೆಚ್ಚಾಗುತ್ತದೆ ಎಂಬುದು ಗೊತ್ತಾಯಿತು. ಇದರಿಂದ ನಮ್ಮ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಚಿನ್ನ ಖರೀದಿ ಕಡಿಮೆ ಮಾಡಿದರೆ, ದೇಶಕ್ಕೆ ಒಳ್ಳೆಯದು ಎಂದು ಗೊತ್ತಾಯಿತು. ದೇಶಕ್ಕೆ ಒಳ್ಳೆಯದನ್ನು ಮಾಡಲು ಬಂದಿರುವ ಪ್ರಧಾನಿ ಮಾತನ್ನು ಕೇಳಬೇಕು' ಎಂದರು.