ಮಹಾರಾಷ್ಟ್ರ: ವಸತಿ ಶಾಲೆಯಲ್ಲಿ ಹಾವು ಕಚ್ಚಿ ಮೂವರು ಬಾಲಕಿಯರು ಸಾವು..
ರಾತ್ರಿ ಮಲಗಿದ್ದಾಗ ಒಟ್ಟು ಆರು ಮಕ್ಕಳಿಗೆ ಹಾವು ಕಚ್ಚಿದೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಉಳಿದ ಬಾಲಕಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಬೆಳಗಿನ ಜಾವ 2ರಿಂದ 2:30ರ ನಡುವೆ ಹಾವು ಕಚ್ಚಿರುವ ಕುರಿತು ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದು ಶಾಲಾ ಆಡಳಿತ ಮಂಡಳಿಯು ತಕ್ಷಣ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದೆ. ಧನೋರಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ 6 ಮತ್ತು 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಗಡ್ಚಿರೋಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2ನೇ ತರಗತಿಯ ಮತ್ತೋರ್ವ ವಿದ್ಯಾರ್ಥಿನಿಯೂ ಅಸುನೀಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
5, 6 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಘಟನೆ ಹೇಗೆ ಸಂಭವಿಸಿತು, ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಹಾಗೂ ಶಾಲಾ ಆಡಳಿತ ನಿಗದಿತ ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಿತ್ತೇ ಎಂಬುದನ್ನು ತಿಳಿಯಲು ಸಮಗ್ರ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು?: ತಜ್ಞರು ಹೇಳುವ ಪ್ರಕಾರ, ಹಾವು ಕಚ್ಚಿದ ಬಳಿಕ ಭಯಪಡದೆ ತಕ್ಷಣದ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
- ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಶಾಂತವಾಗಿರಿಸುವುದು ಮತ್ತು ಹಾವು ಕಚ್ಚಿದ ಅಂಗದ ಚಲನೆಯನ್ನು ಕಡಿಮೆ ಮಾಡಬೇಕಿರುತ್ತದೆ.
- ವಿಳಂಬ ಮಾಡದೇ ಸ್ಥಳೀಯ ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತೆರಳಿ ಆ್ಯಂಟಿ ಸ್ನೇಕ್ ವೇನಮ್ (ಎಎಸ್ವಿ) ಚಿಕಿತ್ಸೆ ಪಡೆದುಕೊಳ್ಳಬೇಕು.
- ಸಾವು ಹೆಚ್ಚಲು ಇದು ಕಾರಣ- ಹಾವು ಕಚ್ಚಿಸಿಕೊಂಡವರು ನೇರವಾಗಿ ಆಸ್ಪತ್ರೆಗೆ ಬರದೆ ಸಾಂಪ್ರದಾಯಿಕ ಅಥವಾ ನಾಟಿ ವೈದ್ಯರ ಬಳಿ ಹೋಗುತ್ತಿದ್ದಾರೆ. ಇದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಎಂದು ತಜ್ಞರು ಹೇಳುತ್ತಾರೆ.